ಖ್ಯಾತ ನಟ ೨೦೦ ಕ್ಕೂ ಹೆಚ್ಚು ಚಿತ್ರಗಳ ಸೋಲಿಲ್ಲದ ಸರದಾರ, ಮಂಡ್ಯದ ಗಂಡು ಅಂಬರೀಷ್ ಇದೀಗ ಪಂಕಜ್ ನಾಯಕತ್ವದ ’ರಣ’ ಚಿತ್ರಕ್ಕೆ ಬಹುಮುಖ್ಯ ಸನ್ನಿವೇಶಗಳಲ್ಲಿ ಅಭಿನಯಿಸಲು ಅಂಬಿ ಒಪ್ಪಿಗೆ ಸೂಚಿಸಿದ್ದಾರೆ. ಇದೇ ವರ್ಷ ಅಂಬರೀಷ ಪಂಕಜ್ ಅವರ ತಂದೆ ಎಸ್. ನಾರಾಯಣ್ ನಿರ್ದೇಶನದ ’ವೀರ ಪರಂಪರೆ’ ಚಿತ್ರದಲ್ಲಿ ಮಿಂಚಿದ್ದರು. ಅಂಬಿ ಅವರ ’ಸ್ವಯಂ ಕೃಷಿ’ ಚಿತ್ರವೂ ಈ ವರ್ಷವೇ ಬಿಡುಗಡೆಯಾಗಿದ್ದು ಈಗಿನ ಸರದಿ ನವ ಯುವ ತರುಣ ಪಂಕಜ್ ಅವರ ಜೊತೆಯಲ್ಲಿ ೪ ದಶಕಗಳ ಚಿತ್ರರಂಗದ ಅನುಭವ ಇರುವ ಅಂಬರೀಷ ಅಭಿನಯಿಸಲು ಒಪ್ಪಿರುವುದೇ ಅತ್ಯಂತ ಸಂತೋಷದ ವಿಚಾರ ಎನ್ನುತ್ತಾರೆ ’ರಣ’ ಚಿತ್ರದ ನಿರ್ದೇಶಕರು.
೨ನೇ ಹಂತದ ಚಿತ್ರೀಕರಣವನ್ನು ಮುಗಿಸಿ ಜನವರಿ ೨೦೧೨ರ ಹೊತ್ತಿಗೆ ತೆರೆಯ ಮೇಲೆ ಬರುವ ಆಶಯವನ್ನು ನಿರ್ದೇಶಕ ಶ್ರೀನಿವಾಸ ಮೂರ್ತಿ ವ್ಯಕ್ತ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದಿರುವ ಇವರು ಈ ಚಿತ್ರದಲ್ಲಿ ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಾ ಹೊಸ ವಿಚಾರವನ್ನು ಪ್ರೇಕ್ಷಕರ ಮುಂದಿಟ್ಟು ಅವರು ಸ್ವಗತದಲ್ಲಿ ತೊಡಗುವಂತೆ ಮಾಡುತ್ತೇನೆ ಎನ್ನುತ್ತಾರೆ.
ನಾಯಕ ನಟ ಪಂಕಜ್ ಜೊತೆಯಾಗಿ ಸುಪ್ರೀತಾ, ಅರ್ಚನಾ ಹಾಗೂ ಸೋನಿಯಾ ಗೌಡ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹೆಸರಾಂತ ನಟಿಯೊಬ್ಬರ ಆಗಮನವೂ ಇದೆ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರಕ್ಕೆ ರಾಜರತ್ನಂ ಛಾಯಾಗ್ರಹಣವಿದೆ.